ಕೇರಳ ವಿಧಾನಸಭಾ ಚುನಾವಣಾ ಪ್ರಚಾರ ಮುಕ್ತಾಯಗೊಂಡಿದ್ದು, ಮಲಯಾಳೇತರ ಮತದಾರರು ಅತೀ ಹೆಚ್ಚು ಇರುವ ಮಂಜೇಶ್ವರ ವಿಧಾನಶಾಬ ಕ್ಷೇತ್ರದ ಫಲಿತಾಂಶ ರಾಜ್ಯದಾದ್ಯಂತ ಕುತೂಹಲ ಕೆರಳಿಸಿದೆ. ಮತದಾನ ಏಪ್ರಿಲ್ 9ರಂದು ನಡೆಯಲಿದ್ದು, ಮತಏಣಿಕೆ ಮೇ 4ರಂದು ನಡೆಯಲಿದೆ.
ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಕಳೆದ ಎರಡು ದಶಕಗಳಲ್ಲಿ ಹೇಳಲಾಗುತ್ತಿದೆ. ಕೇರಳದಲ್ಲಿ ಬಿಜೆಪಿ ಅಕೌಂಟ್ ತೆರೆಯುವುದು ಮಂಜೇಶ್ವರ ಗೆಲ್ಲುವ ಮೂಲಕ ಎಂದು ಭಾವಿಸಲಾಗಿತ್ತಾದರು ಹಿರಿಯ ಬಿಜೆಪಿ ಮುಖಂಡ ಓ ರಾಜಗೋಪಾಲ್ 2016ರಲ್ಲಿ ತಿರುವನಂತಪುರ ಜಿಲ್ಲೆಯ ನೆಮ್ಮಮ್ ಕ್ಷೇತ್ರದಿಂದ ಜಯಿಸಿ, ಕೇರಳದ ಮೊದಲ ಬಿಜೆಪಿ ಶಾಸಕರಾದರು. 2021ರಲ್ಲಿ ಬಿಜೆಪಿ ಇದ್ದ ಒಂದು ಕ್ಷೇತ್ರವನ್ನು ಕಳಕೊಂಡಿತು. ಅದೇ ಸಂದರ್ಭದಲ್ಲಿ ಅಲ್ಪಮತದ ಅಂತರದಿಂದ ಮಂಜೇಶ್ವರದಲ್ಲಿ ಬಿಜೆಪಿ ಸೋತಿತು.
ಸತತವಾಗಿ ಮಂಜೇಶ್ವರವನ್ನು ಐಕ್ಯರಂಗ (UDF) ಘಟಕ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ (IUML)ನ ಭದ್ರಕೋಟೆಯಾಗಿದೆ. ಅದೇ ರೀತಿ ಕಾಸರಗೋಡು ಅಸಂಬ್ಲಿ ಕ್ಷೇತ್ರದ ಕೂಡ ಲೀಗ್ ಭದ್ರಕೋಟೆಯಾಗಿದೆ.
1956ರಿಂದ ಕರ್ನಾಟಕ ಏಕೀಕರಣ ಸಂಘಟನೆಯ ಪರವಾಗಿ ಕನ್ನಡಿಗ ಸ್ವತಂತ್ರ ಅಭ್ಯರ್ಥಿಗಳೇ ಶಾಸಕರಾಗುತ್ತಿದ್ದರು. ಅವರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಮುಖಂಡ ಕಳ್ಳಿಗೆ ಮಹಾಬಲ ಭಂಡಾರಿ ಪ್ರಮುಖರು.
ಅನಂತರ ಕನ್ನಡಿಗ ಎ.ಸುಬ್ಬರಾವ್ ಕಮ್ಯೂನಿಸ್ಟ ಪಕ್ಷದ ಶಾಸಕರಾಗಿ ಕೇರಳದ ಶಿಕ್ಷಣ ಮಂತ್ರಿ ಆಗಿದ್ದರು. 1987ರಿಂದ 2001ರ ತನಕ ನಿರಂತರವಾಗಿ ಮುಸ್ಲಿಂ ಲೀಗ್ ಮುಖಂಡ ಚೆರ್ಕಳಂ ಅಬ್ದುಲ್ಲ ನಾಲ್ಕು ಬಾರಿ ಗೆದ್ದು ಮಂತ್ರಿ ಆಗಿದ್ದರು.
2006ರಲ್ಲಿ ಸಿಪಿಎಂ ನ ಸಿ.ಎಚ್. ಕುಂಞಂಬು ಜಯಗಳಿಸಿದ್ದರು. ಈಗ ಕಾಸರಗೋಡು ಜಿಲ್ಲೆಯ ಉದುಮ ಕ್ಷೇತ್ರದ ಶಾಸಕರಾಗಿರುವ ಸಿ.ಎಚ್. ಕುಂಞಂಬು ಅದೇ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
ಸಣ್ಣ ಅಂತರ ಇರುವುದರಿಂದ ಈ ಬಾರಿ ಬಿಜೆಪಿ ಗೆಲ್ಲಬಹುದು ಎಂಬ ಬಲವಾದ ವಿಶ್ವಾಸ ಬಿಜೆಪಿ ಬೆಂಬಲಿಗರದ್ದು. ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ನಿರಂತರವಾಗಿ ಮಂಜೇಶ್ವರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಬಿಜೆಪಿ ಅಭ್ಯರ್ಥಿ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಚುನಾವಣೆಗೆ ಇದ್ದಾಗ ಮಾತ್ರ ಮಂಜೇಶ್ವರಕ್ಕೆ ಬರುತ್ತಾರೆ ಎಂಬ ಆರೋಪ ಇದೆ. ಸುರೇಂದ್ರನ್ ಬದಲಿಗೆ ಶೋಭಾ ಸುರೇಂದ್ರನ್ (ಅವರ ಮಡದಿ ಅಲ್ಲ) ಅಥವ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಕನ್ನಡತಿ ಅಶ್ವಿನಿ ಅಭ್ಯರ್ಥಿ ಆಗಿದ್ದರೆ ನಿರೀಕ್ಷೆ ಹೆಚ್ಚಿತ್ತು ಎನ್ನುತ್ತಾರೆ ಕಾಸರಗೋಡು ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತಿರುವ ಮಂಜೇಶ್ವರ ಪ್ರಕಾಶ್.
ಎಲ್ಲೆಡೆ, ಮತದಾರರ ಪಟ್ಟಿಯ ಕಟ್ಟುನಿಟ್ಟಿನ ಪರಿಷ್ಕರಣೆ ಎಸ್ಐಆರ್ (SIR - Special Intensive Revision) ಬಿಜೆಪಿಗೆ ಲಾಭ ಆಗುತ್ತಿದ್ದರೆ. ಮಂಜೇಶ್ವರದಲ್ಲಿ ಅದು ಬಿಜೆಪಿಯ ವಿಜಯಕ್ಕೆ ಅಡ್ಡಿ ಆಗಲಿದೆ ಎಂದು ಹೇಳಲಾಗಿದೆ. ಚುನಾವಣಾ ಆಯೋಗ ಮುಸ್ಲಿಂಮರನ್ನು ಗುರಿಯಾಗಿಸಿ ಮತದಾರರ ಹೆಸರನ್ನು ಡಿಲೀಟ್ ಮಾಡುತ್ತಿದೆ ಎಂದು ಶಾಸಕ ಆಶ್ರಫ್ ಆರೋಪಿಸಿದ್ದರು. ಈ ಬಗ್ಗೆ ಕಾನೂನು ಸಮರ ಮಾಡುವುದಾಗಿಯು ಹೇಳಿದ್ದರು. ಸ್ಥಳೀಯಾಡಳಿತ ಚುನಾವಣೆ ವೇಳೆಗೆ ಬಿಜೆಪಿ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡಿಲೀಟ್ ಆಗಿರುವುದು ಗಮನಕ್ಕೆ ಬಂದಿತ್ತು. ಸ್ಥಳಾಂತರಗೊಂಡಿದ್ದಾರೆ ಎಂದು ಡಿಲೀಟ್ ಮಾಡಲಾಗಿದೆ. ಇಂತಹ ಮತದಾರರ ಹೆಸರುಗಳು ಕರ್ನಾಟಕದ ಮತದಾರರ ಪಟ್ಟಿಯಲ್ಲು ಇದೆ. ಮ್ಯಾಪಿಂಗ್ ಮಾಡಿರದ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದ ಬಿಜೆಪಿಗೆ ನಷ್ಟ ಆಗಲಿದೆ ಎಂದು ಹೇಳಲಾಗುತ್ತದೆ.
pic credit: Xಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ ಪ್ರಕಾರ ಬಿಜೆಪಿ ಮತಗಳು ಹೆಚ್ಚು ಡಿಲೀಟ್ ಆಗಿವೆ. ಎಂಟು ಸಾವಿರ ಬಿಜೆಪಿ ಮತಗಳು ಡಿಲೀಟ್ ಆಗಿರಬಹುದು. ಅಂದಾಜು ಆರು ಸಾವಿರ ನಮ್ಮ ಮತಗಳು ಡಿಲೀಟ್ ಆಗಿರಬಹುದು. ಆದುದರಿಂದ ಐಕ್ಯರಂಗ ಅಭ್ಯರ್ಥಿ ಮರು ಆಯ್ಕೆಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಹರ್ಷದ್.
ಕೇರಳದ ಒಟ್ಟು 140 ಸ್ಥಾನಗಳಿಗೆ ಐಕ್ಯರಂಗ ಮತ್ತು ಎಡರಂಗದ ನಡುವೆ ಅತ್ಯಂತ ನಿಕಟ ಸ್ಪರ್ಧೆ ಇದೆ ಎಂದು ಸರ್ವೇಗಳ ಅಭಿಪ್ರಾಯ. ಮ್ಯಾಜಿಕ್ ನಂಬರ್ 71 ಆಗಿದ್ದು, ಒಂದು ಅಥವ ಎರಡು ಶಾಸಕರ ಬೆಂಬಲದಲ್ಲಿ ಯಾರೂ ಕೂಡ ಸರಕಾರ ರಚಿಸಬಹುದು ಎಂಬ ವಾತಾವರಣ ಮೇಲ್ನೋಟಕ್ಕೆ ಕಂಡುಬರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಕಮ್ಯೂನಿಸ್ಟ್ ಮತದಾರರು ಐಕ್ಯರಂಗಕ್ಕೆ ಒಳ ಏಟು ನೀಡುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಪುತ್ತಿಗೆ, ಕುಂಬಳೆ ಪಂಚಾಯತುಗಳಲ್ಲಿ ಎಡರಂಗದ ಮತಗಳಲ್ಲಿ ಕುಸಿತ ಆಗಿರುವ ಉದಾಹರಣೆ ಇದೆ.
ಕಟ್ಟರ್ ಕಮ್ಯೂನಿಸ್ಟರು ಬಿಜೆಪಿಗೆ ಮತ ಹಾಕುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ ಕಾಂಗ್ರೆಸ್ ಬೆಂಬಲಿಗ ಜನಾರ್ದನ್ ರೈ. ಐಕ್ಯರಂಗಕ್ಕೆ ಮತಗಳು ಬರಬಹುದೇ ಹೊರತು ಬಿಜೆಪಿಗೆ ಬದಲಾಗುವ ಸಾಧ್ಯತೆ ಇಲ್ಲ.
ಎಡರಂಗದ ಅಭ್ಯರ್ಥಿಗೆ ಗೆಲ್ಲುವ ಅವಕಾಶವೇ ಇಲ್ಲ ಎಂದು ತಳ್ಳಿಹಾಕುವಂತಿಲ್ಲ. ಹೊರಕ್ಷೇತ್ರದಿಂದ ಬಂದು ಸ್ಪರ್ಧಿಸಿದವರು ನಲ್ವತ್ತು ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದಾರೆ. ಸ್ಥಳೀಯರಾದ ಜಯಾನಂದ ಅವರಿಗಿಂತ ಹೆಚ್ಚು ಮತಗಳಿಸಬಹುದು ಎನ್ನುತ್ತಾರೆ ಸ್ಥಳೀಯರಾದ ಅನೂಷ್.
ಬಿಜೆಪಿ ಮತ್ತು ಎರಡು ರಂಗಗಳ ಬೆಂಬಲಿಗರು ಮಂಜೇಶ್ವರ ತಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೊಂದಿದ್ದಾರೆ. ಕಾಸರಗೋಡು ಜಿಲ್ಲೆಯ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಒಂದು ಐಕ್ಯರಂಗ ಮತ್ತು ಮೂರು ಎಡರಂಗ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
.

